Wednesday 14 November 2012

ಆಗಲೇ ಸೀತಾಪಹರಣ ಆಗಿಬಿಟ್ಟಿದೆ


’ಕೆಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ,ಕುಟ್ಟಾ ಕುಟ್ಟಾ, ಕೊಟ್ಟೋನ್ ಕೆಟ್ಟ, ಕೊಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ, ಕೊಟ್ಟೋನ್ ಕೆಟ್ಟ, ಕೊಟ್ಟೋನ್ ಕೆಟ್ಟ’ ಈ ಪರಿಯ ತಾಳ ಬದ್ಧದ ಕುಟ್ಟುವ ಶಬ್ದವನ್ನು ಎಲ್ಲಿ ಕೇಳಬಹುದು?ಎಲ್ಲಿ?ಹೇಗೆ?ಅಂತೀರಾ?

ಸಾಂಪ್ರಾದಾಯಿಕ ಚಿನಿವಾರ ಪೇಟೆಯಲ್ಲಿ ಈ ತಾಳ ಬದ್ಧ ಕುಟ್ಟುವ ಶಬ್ದವನ್ನು ನಾವು ಕೇಳುತ್ತೇವೆ. ಅಲ್ಲಿನ ಕುಶಲಕರ್ಮಿಗಳು ಪುಟಾಣಿ ಅಗ್ಗಿಷ್ಟಿಕೆಗೆ ಕೊಳಲಿಗಿಂತ ತೆಳುವಾದ ಸಣ್ಣ ಊದು ಕೊಳವೆಗಳಿಂದ ಊದುತ್ತಾ, ಅದರಲ್ಲಿನ ಕೆಂಡದಲ್ಲಿ ಬಂಗಾರದ ಗಟ್ಟಿಯನ್ನು ಚಿಮ್ಮಟದಿಂದ ಹಿಡಿದು ಬಿಸಿ ಮಾಡಿ ಅಡಿಗಲ್ಲಿನ ಮೇಲಿಟ್ಟು ಸಣ್ಣ ಸುತ್ತಿಗೆಯಿಂದ ಬಡಿಯುತ್ತಿರುತ್ತಾರೆ. ಕೆಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ,ಕುಟ್ಟಾ ಕುಟ್ಟಾ, ಕೊಟ್ಟೋನ್ ಕೆಟ್ಟ, ಕೊಟ್ಟೋನ್ ಕೆಟ್ಟ ಆ ಬಡಿತದ ಶಬ್ದ ರೂಪ. ಹಿಂದೆ,ಅರಸುಗಳ ಕಾಲದಲ್ಲಿ ಬಂಗಾರದ ನಾಣ್ಯಗಳು ಚಲಾವಣೆಯಲ್ಲಿದ್ದಾಗ, ರಾಜರು, ಅರಸರು. ಸಾಮ್ರಾಟರು, ಚಿನಿವಾರರು ತಮ್ಮ ಟಂಕಸಾಲೆಗಳಲ್ಲಿ ನಾಣ್ಯಗಳನ್ನು ತಯಾರಿಸಲು ನಿಯಮಿಸಿಕೊಳ್ಳುತ್ತಿದ್ದರು.ಅವರಿಗೆ ವರ್ಷಕೊಮ್ಮೆ ವೇತನ ನೀಡಲಾಗುತ್ತಿತ್ತು. ಅವರು ಕೆಲವೊಮ್ಮೆ ಶಾಸನಗಳನ್ನು, ತಾಮ್ರಪತ್ರಗಳನ್ನು ಬರೆಯುತ್ತಿದ್ದರು. ಹಳದಿ ಲೋಹ ಬಂಗಾರ, ಬಂಗಾರದ ಒಡವೆ ಯಾರಿಗೆ ಬೇಡ? ಎಲ್ಲರೂ ಈ ಹಳದಿ ಲೋಹದ ಮೋಹದ ಮೋಡಿಗೆ ಒಳಗಾದವರೇ. ಎಲ್ಲರೂ ಬಂಗಾರ. ಬಂಗಾರದ ಒಡವೆಗೆ ಆಶೆ ಪಡುವವರೆ. 

ಚಿನಿವಾರ ಪೇಟೆಯಲ್ಲಿ ಬಂಗಾರ, ಬಂಗಾರದ,ಬೆಳ್ಳಿಯ ಒಡವೆಗಳನ್ನು ಮಾರಲಾಗುತ್ತದೆ. ಬಂಗಾರ, ಬೆಳ್ಳಿಗಳ ಜೊತೆಗೆ ವಜ್ರ, ಮುತ್ತು, ರತ್ನ, ಮಣಿಗಳನ್ನು ಅಳವಡಿಸಿ ಸೂಕ್ಷ್ಮ ಕುಸರಿ ಕೆಲಸ ಮಾಡಿ ಅಭರಣಗಳನ್ನು ತಯಾರಿಸುವವರನ್ನು ಪತ್ತಾರರು, ಅರ್ಕಸಾಲಿಗಳು, ಶೀಲವಂತರು, ಸರಾಫ್‌ರು, ಚಿನಿವಾರರು, ಸೋನಾರರು, ಅಚಾರಿಗಳು ಎಂದು ಕರೆಯುತ್ತಾರೆ. ಈ ಚಿನಿವಾರರನ್ನು ಅಕ್ಕಸಾಲಿಗರು ಎಂದೂ ಕರೆಯುತ್ತಾರೆ. ಇಲ್ಲಿ, ಅಕ್ಕಸಾಲಿಗರು ಎಂದರೆ, ಅವರು ಅಕ್ಕನಿಂದ ಸಾಲ ಪಡೆದವರು ಅಥವಾ ಅಕ್ಕನಿಗೆ ಸಾಲ ಕೊಟ್ಟವರು ಇರಬೇಕು ಎಂಬ ಸಂಶಯ ಮೂಡಿದರೆ ಅದಕ್ಕೆ ಅಶ್ಚರ್ಯಪಡಬೇಕಿಲ್ಲ. ಅಕ್ಕಸಾಲಿಗರು ಎಂದೂ ಅಕ್ಕನಿಂದ ಸಾಲ ಪಡೆದವರಲ್ಲ. ಅಕ್ಕನಿಗೆ ಸಾಲ ಕೊಟ್ಟವರಲ್ಲ. ಆದರೆ ಅಕ್ಕಂದಿರ ಬಂಗಾರವನ್ನು ಕದ್ದಿರಬಹುದೋ ಏನೋ? ಏಕೆಂದರೆ, ಅಕ್ಕಸಾಲಿಗನಿಗಿಂತ ಕಳ್ಳನಿಲ್ಲ, ಮಕ್ಕೆ ಗದ್ದೆಗಿಂತ ಬೆಳೆ ಇಲ್ಲ, ಆಚಾರಿ ಮಾತು ಆಚೆಗೊಂದು ಈಚೆಗೊಂದು, ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡ ಎಂಬ ಗಾದೆ ಮಾತುಗಳು ಜನಮಾನಸದಲ್ಲಿ ಪ್ರಚಲಿತದಲ್ಲಿವೆ. ಅಕ್ಕಸಾಲಿಗ ಅಕ್ಕನ ಚಿನ್ನ ಕದ್ದ ಬಗೆಗಿನ ಒಂದು ಹಾಸ್ಯ ಪ್ರಧಾನವಾದ ಪುಟಾಣಿ ಜಾನಪದೆ ಕತೆ ನಮ್ಮ ನೆರೆಯ ಆಂಧ್ರಪ್ರದೇಶದ ಜನಪದರಲ್ಲಿ ಪ್ರಚಲಿತದಲ್ಲಿದೆ. 

ರಾಮಚಂದಪುರ  ಎಂಬ ಊರಿತ್ತು. ಆ ಊರಲ್ಲಿ ಒಂದು ಚಿನಿವಾರ ಎಂಬ ಕುಟುಂಬ ನೆಲೆಸಿತ್ತು. ಆ ಚಿನಿವಾರ ಕುಟುಂಬದ ಮನೆತನ ಆ ನಾಡಿನಲ್ಲೆಲ್ಲಾ  ಪ್ರಸಿದ್ಧಿ ಪಡೆದಿತ್ತು. ತುಂಬಾ ಹಿಂದೆ ಕಾಕತಿಯರು ಮತ್ತು ನಂತರದ ವಿಜಯನಗರ ಅರಸ ಕಾಲದಿಂದಲೂ ಅವರದು ಆ ಸೀಮೆಯಲ್ಲಿ ಚಿನಿವಾರ ಮನೆತನವೆಂದು ಹೆಸರುವಾಸಿಯಾಗಿತ್ತು. ಓಲೆ, ಮೂಗುತಿ, ಪದಕ, ಅಡ್ಡಿಕೆ, ಲೋಲಾಕು, ವಂಕಿ, ಡಾಬು, ಕಾಲುಗೆಜ್ಜೆ, ಕಾಸಿನಸರ, ಉಂಗುರ, ಬಳೆ, ಮಾಂಗಲ್ಯ, ಕಾಲುಂಗುರ ಹೀಗೆ ಬಗೆಬಗೆಯ ಆಭರಣಗಳನ್ನು ವಿವಿಧ ನಮೂನೆಗಳಲ್ಲಿ ತಯಾರಿಸುತ್ತಿದ್ದ ಆ ಮನೆತನದಲ್ಲಿ ದಶರಥನೆಂಬ ಚಿನಿವಾರನಿದ್ದ. ಚಿನಿವಾರ ದಶರಥನಿಗೆ ಇಬ್ಬರು ಮಕ್ಕಳಿದ್ದರು .ಇಬ್ಬರೇನು ಆತನಿಗೆ ಒಟ್ಟು ಹತ್ತು ಜನ ಮಕ್ಕಳಿದ್ದರು. ಅದರಲ್ಲಿ ಆರು ಮಂದಿ ಗಂಡು ಮಕ್ಕಳಿದ್ದರೆ, ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದರು. ಆದರೆ ಅವನ ದುರಾದೃಷ್ಟ, ಎಂಟು ಜನ ಮಕ್ಕಳು ಕಾಯಿಲೆ ಕಸಾಯಿ ಬಂದು ತೀರಿಕೊಂಡರು, ಆಗ ಮನೆಯಲ್ಲಿ ಒಂದು ಹೆಣ್ಣು ಮಗು ಮತ್ತು ಇನ್ನೊಂದು ಗಂಡು ಮಗು ಮಾತ್ರ ಉಳಿದವು. ದಶರಥ ದಂಪತಿ ಅವೆರೆಡೂ ಮಕ್ಕಳನ್ನು ತಮ್ಮ ಕಣ್ಣುಗಳೆಂದು ತಿಳಿದು ಅಕ್ಕರೆಯಿಂದ ಬೆಳೆಸಿದ್ದರು. ಹತ್ತು ಹೆತ್ತು, ಎರಡು ಮಕ್ಕಳ ಸುಖ ಕಾಣುತ್ತಿದ್ದ ಆತನ ಹೆಂಡತಿ, ಪತಿಗೆ ತಕ್ಕ ಹೆಂಡತಿಯಾಗಿದ್ದಳು. ಹಿರಿಯ ಮಗಳಿಗೆ  ಸುಹಾಸಿನಿ ಎಂದು ಹೆಸರಿಟ್ಟಿದ್ದರೂ, ಎಲ್ಲರೂ ಪ್ರೀತಿಯಿಂದ, ಸೀತೆ,ಸೀತೆ ಎಂದೇ ಕರೆಯುತ್ತಿದ್ದರು. ಕಿರಿಯ ಮಗನ ಹೆಸರು ರಾಮು. ಆತ ತಂದೆಯ ಜೊತೆಯಲ್ಲೇ ಕುಳಿತು ಚಿನಿವಾರಿಕೆಯಲ್ಲಿ ನೈಪುಣ್ಯತೆ ಗಳಿಸಿದ್ದ. ಯುಕ್ತ ಕಾಲದಲ್ಲಿ ಅಕ್ಕನಿಗೆ ಸಮೀಪದ ಲಕ್ಷ್ಮೀಪುರಕ್ಕೆ ಮದುವೆ ಮಾಡಿಕೊಡಲಾಗಿತ್ತು. ಹಬ್ಬ ಹರಿದಿನಗಳಲ್ಲಿ ಬಂದು, ಹೋಗಿ ಮಾಡುತ್ತಿದ್ದ ಅಕ್ಕ ಸುಹಾಸಿನಿಯ ಗಂಡ, ಪಾಳೆಗಾರನೊಬ್ಬನ ಆಸ್ಥಾನದಲ್ಲಿ ಕರುಣಿಕನಾಗಿದ್ದ. ಇತ್ತ ರಾಮುವೂ ಹರೆಯಕ್ಕೆ ಕಾಲಿಡಲು ಆವನಿಗೂ ಚಿನಿವಾರ ದಶರಥ ಮದುವೆ ಮಾಡಿದ. ತಮ್ಮ ರಾಮುವಿಗೂ, ಅಕ್ಕ ಸುಹಾಸಿನಿಗೂ ಮಕ್ಕಳಾದವು ದಶರಥನ ಮನೆ ನಂದಗೋಕುಲವಾಗಿತ್ತು.

ಅಷ್ಟರಲ್ಲಿ ದಶರಥನಿಗೆ ವಯಸ್ಸಾಗಿ ವಯೋಸಹಜವಾಗಿ ಕಣ್ಣು ಅಷ್ಟು ಸರಿಯಾಗಿ ಕಾಣದಾಗಿತ್ತು. ಚಿನಿವಾರಿಕೆಯ ಎಲ್ಲಾ ಜವಬ್ದಾರಿಯನ್ನು ಮಗ ರಾಮುವಿಗೆ ಒಪ್ಪಿಸಿ ರಾಮಾ ಕೃಷ್ಣಾ ಎನ್ನುತ್ತಾ ಆತ ಕಾಲ ಕಳೆಯತೊಡಗಿದ್ದ. ಕಾಲ ಎಂದೂ ನಿಲ್ಲದಲ್ಲ. ಸುಹಾಸಿನಿಯ ಮಗಳು ವಯಸ್ಸಿಗೆ ಬಂದಿದ್ದಳು. ಅವಳಿಗೆ ಮದುವೆ ಮಾಡುವ ತುರಾತುರಿಯಲ್ಲಿದ್ದ ಸುಹಾಸಿನಿಯು, ಕರುಣಿಕನಾಗಿದ್ದ ತನ್ನ ಗಂಡನ ಕೆಲಸ ಮೆಚ್ಚಿ ಅವನಿಗೆ ಪಾಳೆಗರ ಕೊಟ್ಟಿದ್ದ ಬಂಗಾರದ ಕೈ ಕಡಗ ಮುರಿಸಿ ಮಗಳಿಗೆ ಓಲೆ, ಮೂಗುತಿ,ಮಾಂಗಲ್ಯಸರ, ಬಳೆ, ಉಂಗುರ, ಪದಕ ಮಾಡಿಸಲು ನಿರ್ಧರಿಸಿದಳು. ಗಂಡನ ಕೈ ಕಡಗವನ್ನು ಹಿಡಿದುಕೊಂಡು ತವರು ಮನೆಗೆ ಬಂದ ಸುಹಾಸಿನಿ, ತಮ್ಮನಿಗೆ ಕೈ ಕಡಗವನ್ನು ಕೊಟ್ಟಳು. ಅದನ್ನು ಕೆಡಸಿ, ಮಗಳಿಗೆ ಓಲೆ, ಮೂಗುತಿ, ಮಾಂಗಲ್ಯಸರ, ಬಳೆ, ಉಂಗುರ, ಪದಕ ಮಾಡುವಂತೆ ಕೋರಿದಳು. ಆದಷ್ಟು ಬೇಗ ಮಾಡಿಕೊಡುವಂತೆ ಅವನ್ನು ಒಪ್ಪಿಸಿದಳು.

ಮುಂದುವರಿಯುತ್ತದೆ . . . . . . .

 - ಎಫ್.ಎಂ.ನಂದಗಾವ್

No comments:

Post a Comment